Sunday, July 18, 2021

#ಸ್ಮಶಾನ ವೈರಾಗ್ಯ ಕ್ಷಣಿಕ...!

ಅವರು ನಮ್ಮನ್ನೆಲ್ಲ ಬಿಟ್ ಹೋಗ್ಬಿಟ್ರು ಅಂತ ಫೋನ್ ಬರುತ್ತೆ, ತಕ್ಷಣಕ್ಕೆ ಸುದ್ದಿ ಬಂದಾಗ ಶಾಕ್ ಆಗುತ್ತೆ, ಇನ್ಮುಂದೆ ಅವರು ನಮ್ ಜೊತೆಲಿ ಇರಲ್ವಲ್ಲ ಅನ್ನೊ ಕೊರಗು ಶುರುವಾಗುತ್ತೆ, ಹಿಂದೆ ಅವರ ಜೊತೆಗೆ ಬದುಕಿದ ನೆನಪುಗಳು ಹಾಗೇ ಕಣ್ಮುಂದೆ ಬರುತ್ವೆ, ಇದೆಲ್ಲದರ ಪರಿಣಾಮ ಕಣ್ಣಲ್ಲಿ ಅನಿರೀಕ್ಷಿತವಾಗಿ ನೀರು ಬಂದ್ಬಿಡುತ್ತೆ...


ಸರಿ ದೂರದ ಊರು ಬೇರೆ ಏನ್ ಮಾಡೋದು? ಎಲ್ರೂ ಒಂದ್ ಗಾಡಿ ಬುಕ್ ಮಾಡಿ ಅಥವ ಇರುವವರಲ್ಲೆ ಯಾರ್ದಾದ್ರು ಗಾಡಿ ಇದ್ರೆ ಮಣ್ಣಿಗೆ ಹೋಗ್ಬರಣ ಅಂತ ಹೊರಡ್ತಾರೆ, ಅರ್ಧ ದಾರಿಯವರೆಗೂ ಸತ್ತವರ ನೆನಪುಗಳನ್ನ ಮೆಲುಕು ಹಾಕಿ ಅಳ್ತಾರೆ, ದಾರಿ ಮಧ್ಯದಲ್ಲಿ ಹಸಿವು ಅಂತ ಹೋಟೆಲ್ನಲ್ಲಿ ಊಟ ಮಾಡಿ ನಗ್ತಾ ನಗ್ತಾ ಮಾತಾಡ್ತಾರೆ, ಊರಿಂದ ಫೋನ್ ಮೇಲೆ ಫೋನ್ ಬರುತ್ವೆ ಬೇಗ ಬನ್ನಿ ಹೆಣವನ್ನ ಸಂಜೆವರೆಗೂ ಇಟ್ಕಳಕ್ ಆಗಲ್ಲ ಅಂತ, ಇನ್ನೇನ್ ಬಂದ್ವಿ ಬಂದ್ವಿ ಅಂತಾನೇ ಮೂರ್ ಗಂಟೆ ಮಾಡ್ತಿವಿ, ಊರ್ ಬರೋವರ್ಗೂ ನಗ್ತಾ ನಗ್ತಾ ಹೋಗ್ತಿವಿ, ಊರ್ ಬಂದು ಹೆಣ ಕಂಡ ತಕ್ಷಣ ಸಹಜವಾಗಿ ಕಣ್ಣೀರು ಕಂಟ್ರೋಲ್ ಆಗೋದಿಲ್ಲ, ಅಳ್ತೀವಿ ಬೇರೆಯವರಿಗೂ ಸಮಾಧಾನ ಮಾಡ್ತಿವಿ, ಕೊನೆಗೆ ಮಣ್ಣು ಮಾಡಿ ಹೊರಡೋಕೆ ಸಿದ್ದರಾಗ್ತಿವಿ,


ಮಸಣದಿಂದ ಬಂದು ಎರಡ್ ದಿನದಲ್ಲೇ ನಾರ್ಮಲ್ ಜೀವನಕ್ಕೆ ಒಗ್ಗಿಕೊಳ್ತೀವಿ, ಮತ್ತೆ ತಿಥಿಯ ದಿನ ಹೋಗಿ ಅವರ ಫೋಟೋವನ್ನ ನೋಡಿ ಬಿಕ್ಕಿ ಬಿಕ್ಕಿ ಅಳ್ತೀವಿ, ಸಂಜೆ ಮತ್ತೆ ಎಲ್ರಿಗೂ ನಗ್ತಾ ನಗ್ತಾ ಬಾಯ್ ಹೇಳಿ ನಮ್ ನಮ್ ಊರುಗಳಿಗೆ ವಾಪಾಸ್ ಬರ್ತೀವಿ, ಸಂತೋಷದ ವಿಚಾರ ಏನಂದ್ರೆ ಸತ್ತವರು ಬದ್ಕಿದ್ದಾಗ ಅವರ ಬಗ್ಗೆ ಒಳ್ಳೇದ್ ಹೇಳಿರ್ತಿವೊ ಇಲ್ವೊ ಗೊತ್ತಿಲ್ಲ ಒಟ್ನಲ್ ಸತ್ಮೇಲಂತೂ ತಿಥಿ ಮುಗ್ಯೋವರ್ಗೂ ಅವರ ಬಗ್ಗೆ ಗುಣಗಾನ ಮಾಡ್ತಿವಿ, ತಿಂಗಳು ಕಳೆಯುವಷ್ಟರಲ್ಲಿ ನಮ್ಮಲ್ಲಿ ಒಬ್ರು ಸತ್ರು ಅನ್ನೋ ಯೋಚನೆ ಕೂಡ ನಮ್ ತಲೆಲಿ ಇರೋದಿಲ್ಲ, ಇದೆಲ್ಲ ಸಹಜವಾಗಿ ಎಲ್ಲರ ಜೀವನದಲ್ಲಿ ನಡೆಯುವಂತ ಘಟನೆ, ಸತ್ತವರ ಹೆತ್ತವರಿಗೆ ಮತ್ತು ಕಟ್ಟಿಕೊಂಡವರಿಗೆ ಬಿಟ್ರೆ ಅವರ ಸಾವಿನ ನೋವು ತುಂಬ ಜನರಿಗೆ ಹೆಚ್ಚು ದಿನ ಕಾಡೋದಿಲ್ಲ...


ಇಷ್ಟೆಲ್ಲ ಗೊತ್ತಿದ್ಮೇಲೂ ಬದುಕಿನುದ್ದಕ್ಕೂ ಮತ್ತೊಬ್ಬರನ್ನ ಮೆಚ್ಚಿಸಿ ಬದುಕೊ ಖಾಯಿಲೆ ನಮ್ಮಿಂದ ದೂರವಾಗಿಲ್ಲ, ಪ್ರಪಂಚ ಯಾವ ಹಂತಕ್ಕೆ ಮುಂದುವರೆದಿದೆ ಅಂದ್ರೆ ಒಬ್ಬರ ಫೋಟೋ ಹಾಕಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಸ್ಟೇಟಸ್ ಹಾಕಿ ಐದ್ ನಿಮಿಷದ ಅಂತರದಲ್ಲೇ ಮತ್ತೊಬ್ಬರ ಫೋಟೋ ಹಾಕಿ ಹ್ಯಾಪಿ ಹುಟ್ದಬ್ಬ ಚಿನ್ನು ಅಂತ ಹಾಕುವಷ್ಟರ ಮಟ್ಟಕ್ಕೆ ಭಾವನೆಗಳು ಬೆಲೆಯನ್ನ ಕಳ್ಕೊಂಡಿವೆ, ನಾಳೆ ನಮ್ಮ ಸಾವುಗಳಿಗೂ ಇದೇ ರೀತಿಯ ಪ್ರತಿಕ್ರಿಯೆ ಇರುತ್ತೆ, ನಮ್ಮನ್ನ ಹಚ್ಚಿಕೊಂಡವರು ತುಸು ಹೆಚ್ಚು ನೊಂದುಕೊಳ್ಳಬಹುದು ಅನ್ನೋದ್ ಬಿಟ್ರೆ ನಾವು ಇದ್ವಿ ಅನ್ನೋದನ್ನೇ ಜನ ಮರೆತು ಜೀವನದ ಬಂಡಿಯಲ್ಲಿ ಸಾಗ್ತಾ ಇರ್ತಾರೆ, ಹಾಗಾದ್ರೆ ಜೀವನದ ಉದ್ದಕ್ಕೂ ಮತ್ಯಾರನ್ನೊ ಮೆಚ್ಚಿಸಿ ಬದ್ಕಿದ್ರಿಂದ ನಮಗೆ ಸಿಕ್ಕಿದ್ದೇನು? ಹೂಹ್ಞು ಏನೂ ಸಿಗಲ್ಲ, ಅಕಸ್ಮಾತ್ ಏನೊ ಸಿಗ್ತು ಅಂದ್ರು ಅದನ್ ಗಮನಿಸೋಕೆ ನಾವೇ ಇರಲ್ವಲ್ಲ, ಹಾಗಿದ್ಮೇಲೆ ಯಾಕ್ ಆ ಥರ ಬದುಕ್ಬೇಕು ಅನ್ನೋದೆ ಇವತ್ತಿಗೂ ಗೊಂದಲ...

ಇವತ್ತಿಗೂ ಆಶ್ಚರ್ಯ ಆಗೋದ್ ಏನಂದ್ರೆ ಬದುಕು ಎಷ್ಟು ವೇಗವಾಗಿ ಯಾಂತ್ರಿಕವಾಗುತ್ತಿದೆ ಅಂದ್ರೆ ಮನಸ್ಸಲ್ಲಿ ಹುಟ್ಟಿದ ಭಾವನೆಗಳಿಗೆ ಸಮಯವೇ ಇಲ್ಲದಂತಾಗಿದೆ, ಸತ್ತವರ ನೋವಿನ ನಡುವೆಯೂ ತಮಾಷೆಯ ಮನಸ್ಥಿತಿಯಂತೆ ವರ್ತಿಸಿ ತಕ್ಷಣಕ್ಕೆ ಮತ್ಯಾರ ಹುಟ್ದಬ್ಬಕ್ಕೆ ವಿಷ್ ಮಾಡಿ ಖುಷಿ ಪಡುವಷ್ಟು...!


                                                                                                                                - ಮತ್ತೆ ಸಿಗುವಾ ನಾಳೆಗಳ್ಳಿದ್ದರೆ

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...