Wednesday, June 20, 2018

ಕನಸುಗಳೂ ದುಬಾರಿಯೆನಿಸುತ್ತಿವೆ..!

  
ಮಹಾನಗರಿಯಲಿ ಈಗೀಗ ಕನಸುಗಳೂ ದುಬಾರಿಯೆನಿಸುತ್ತಿವೆ

ಅದೆಷ್ಟು ಪುಳಕಗಳ ಪುಟಿತವಿತ್ತು, ಊರಿಂದ ಬಸ್ಸು ಹತ್ತುವಾಗ
ಹೊಸ ಶುರುವಾತಿನ ಹುರುಪು, ಗೆಳೆತನದ ಮೆಲಕು, ನೌಕರಿಯ ಅಳುಕು
ಅದೆಷ್ಟು ಮೂಟೆ ಮೂಟೆ ನಿರೀಕ್ಷೆಗಳಿತ್ತು ಮೆಜೆಸ್ಟಿಕ್ಕಿನಲ್ಲಿ ಇಳಿಯುವಾಗ
ಅವಕಾಶಗಳ ಆಗರ, ಐದಾರಂಕಿಯ ಪಗಾರ, ಜನಜಂಗುಳಿ ಸಾಗರ
ಬರಬರುತ್ತಾ ಅದೇಕೋ ಎಲ್ಲವೂ ಬೋರಾಗಿದೆ; ನಾಲಿಗೆ ಹಾಳಾಗಿದೆ
ಕ್ಯೂ ನಿಂತು ತಿನ್ನುತಿದ್ದ ವೀಬೀ ದೋಸೆಯಲ್ಲೂ ಜಿಡ್ಡು ಕಾಣಿಸುತ್ತಿದೆ
ಹೊಸದೆನಿಸಿದ್ದೆಲ್ಲ ಬೇಕೆನಿಸಿ, ಹಿಂದೆ ಹಿಂದೆ ಹಿಂದೆ ಓಡಿ ಸುಸ್ತಾಗಿದೆ
ಮಾಯಾಮೃಗವೆಂಬುದು ಮೆಟ್ರೋ ಸಿಟಿಯ ರೂಪದಿ ಅವತಾರವೆತ್ತಂತಿದೆ
ಥುತ್ತೆಂದು ಎದುರಾಗುತ್ತವೆ, ಶುರುವಲ್ಲೆಲ್ಲೋ ಖುಷಿಕೊಟ್ಟ ಸುಂದರ ಸ್ಪಪ್ನಗಳು
ಮಂಕಾಗಿಸಿ, ಗೋಳಾಡಿಸಿ, ನಿದ್ದೆಗೆಡಿಸಿ ಜೀವಹಿಂಡುತ್ತಿವೆ ಆ ವಿಶೇಷಾತ್ಮಗಳು
ಆತ್ಮಹತ್ಯೆಯೋ ಕೊಲೆಯೋ ಸಹಜ ಸಾವೋ;ಅವೆಲ್ಲ ಸತ್ತಿರುವುದಂತೂ ನಿಜ
ಆಸೆ ಹೊತ್ತವರೇ ಮುಕ್ತಿ ಪಡೆಯರಂತೆ, ಇನ್ನು ಕನಸುಗಳು ಏನಾಗಬೇಡ ?
ಎಲ್ಲ ಸರಿಯಿದೆಯೆಂದು ಬೆಳಗೆದ್ದು ಇನ್‍ಶರ್ಟು ಮಾಡಿ ಹೊರಡುವುದು ಸರಿಯೇ
ಆದರೆ ತಡರಾತ್ರಿಯ ಏಕಾಂತ ಮಾತ್ರ ಕಷ್ಟವಾಗುತ್ತದೆ, ಪಾಪಪ್ರಜ್ಞೆ ಕಾಡುತ್ತದೆ
ಅದೃಷ್ಟಕ್ಕೆ, ಹೊಸ ಕನಸುಗಳ ಹುಚ್ಚು ಹೊಳೆಯಲ್ಲಿ ತೇಲಿ ಹೋಗದ್ದೂ ಕೆಲವಿದೆ
ಊರಿಂದ ಕರೆತಂದ ಹಳೆಯ ಕನಸುಗಳು ಮಾತ್ರ ಬ್ಯಾಗಿನಲ್ಲಿ ಭದ್ರವಾಗಿವೆ
ಎಲ್ಲ ಬಿಟ್ಟು ಹೊರಟೇ ಬಿಡುವ ಎನಿಸುತ್ತದೆ, ಊರ ಬಸ್ಸು ಕಣ್ಣೆದುರು ಕಂಡಾಗ
ಪಡೆಯಬೇಕಿದೆ ಉತ್ತರ ನಾನು, ಅಂದು ಊರು ಬಿಡಿಸಿದ ಪ್ರಶ್ನೆಗಳಿಗೆ
ಅಲ್ಲಿಯವರೆಗೆ ಹೊಸ ಕನಸುಗಳ ಹುಟ್ಟಿಸುವಿಕೆಗೊಂದು ದೀರ್ಘವಿರಾಮ

ಆದರೂ ಅದೇಕೋ, ಮಹಾನಗರಿಯಲಿ ಕನಸುಗಳೂ ದುಬಾರಿಯೆನಿಸುತ್ತಿವೆ
ಆರೆವಯಸ್ಸಿಗೇ ಸತ್ತು ಪ್ರೇತಗಳಾಗಿ; ನಡುರಾತ್ರಿಯೆಲ್ಲ ಕಾಡುತ್ತವೆ;

Tuesday, June 19, 2018

ಬದಲಾವಣೆ ಜಗದ ನಿಯಮ...!

  
ಊರೆಲ್ಲ ಖಾಲಿಯಾಗುತ್ತಿದೆ; ಆಟ ಮುಗಿದ ಅಂಗಳದಂತೆ
ಶಹರ ತುಂಬುತ್ತಲಿದೆ; ಇನ್ನೂ ಹೊರಡದ ಟೆಂಪೋವಿನಂತೆ
ನಾನೂ ಓಡುತ್ತಿದ್ದೇನೆ ಅದೇ ನಗರಿಯಲ್ಲಿ; ಸಿಟಿಯ ಸುಖದ ಅಮಲಿನಲ್ಲಿ
ಊರು-ತೋಟ-ನೆಮ್ಮದಿ ಕಾಡುತ್ತವೆ ತಡರಾತ್ರಿಯ ಕನವರಿಕೆಗಳಲ್ಲಿ

ಅಜ್ಜ-ಅಜ್ಜಿ-ದೊಡ್ಡಮ್ಮ-ದೊಡ್ಡಪ್ಪ ಇನ್ನು ಶ್ರಾದ್ಧಗಳಲ್ಲಷ್ಟೇ ಸಿಗುವುದು
ರಜೆ ಹಾಕಿ ಊರಿಗೆ ಹೋಗಿರಬೇಕು; ಕಾವ್ ಕಾವ್ ಎಂದು ಕರೆಯಬೇಕು
ಊಟ ಮಾಡಿ ಕೈ ತೊಳೆದು ಬೆಟ್ಟ ಹತ್ತಿ; ಮೇಲ್ ಚೆಕ್ ಮಾಡಬೇಕು
ಇನ್ಯಾವಗಲೋ ಬರುವೆನೆಂದು ಸಬೂಬು ಹೇಳಿ ಸ್ಲೀಪರ್ ಬಸ್ಸು ಹತ್ತಬೇಕು

ತೊಂದರೆಯೇನಿಲ್ಲ ಈ ಪಟ್ಟಣದಲ್ಲಿ; ಬೆವರು ಬಸಿಯುವವರಿಗೆ ಬದುಕಲು
ಉಸಿರಾಡಲು ಶುದ್ಧ ಗಾಳಿ ಸ್ವಲ್ಪ ಕಷ್ಟ; ಟ್ರಾಫಿಕ್ಕಾಸುರನ ಲಹರಿ ನಿತ್ಯ ಅಸ್ಪಷ್ಟ
ಹೊರಡಲೇಬೇಕೆನ್ನುವುದಕ್ಕೆ ಸ್ಪಷ್ಟಕಾರಣವೇನೂ ಸಿಗುತ್ತಿಲ್ಲ
ಕಾರ್ಪರೇಟಿನಲ್ಲಿ ಮುಳುಗಿದ ಮೇಲೆ ಸತ್ಯ-ಪ್ರಾಮಾಣಿಕತೆಗಳೂ ಬದುಕಿಲ್ಲ

ಜೊತೆಗೆ ಊರೂ ಮೊದಲಿನಂತಿಲ್ಲ; ಬದಲಾವಣೆ ಜಗದ ನಿಯಮ
ಬೇಡಿಕೆ-ಪೂರೈಕೆ;ಬ್ಲಾಕ್ ಆಂಡ್ ವೈಟ್ ಬದುಕಿಗೆ ಬಣ್ಣದ ಆಯಾಮ
ಆದರೆ, ಮೊದಲಂತೆ ಅನ್ನದ ಚರಿಗೆ ಬಿಸಿಯಾಗುವುದಿಲ್ಲ; ಕಾರಣ ಅಷ್ಟೆಲ್ಲ ಉಣ್ಣುವವರಿಲ್ಲ
ಊರ ಪ್ರತಿಷ್ಠೆ: ಬೇಲಿ ಸಲುವಾಗಿ ನಂಬರವಿಲ್ಲ; ಕಾರಣ ಬೇಲಿ ಕಾಯಲೂ ಜನರಿಲ್ಲ

ಅಲ್ಲೂ ಇಲ್ಲೂ ನನ್ನಲ್ಲೂ ಎಲ್ಲ ಬದಲಾಗಿವೆ
ಆದರೆ ನಾ ಕಂಡಿದ್ದ ಊರು ನನ್ನಲ್ಲೇ ಭದ್ರವಾಗಿದೆ;
ನನ್ನನ್ನು ಇಂದಿಗೂ ಸಂತೈಸುತ್ತಿದೆ
ಎಲ್ಲ ಬಿಟ್ಟು ಬರಿಗೈಯ್ಯಲ್ಲಿ ಬಂದಾಗಲೂ
ಅಮ್ಮನಂತೆ ಬಿಗಿದಪ್ಪಿಕೊಳ್ಳುತ್ತದೆ,
ಅಪ್ಪನಂತೆ ಹೆಗಲುಕೊಡುತ್ತದೆ
                                                                  

ಹೇಳದ ಮಾತು..!


ಒಂದನೇ ಪ್ರೀತಿ ಬಗ್ಗೆ ಎರಡನೇ ಹುಡುಗಿಗೆ ಹೇಳಬಹುದೇ? ಮೂರು ಬಾರಿ ಯೋಚಿಸಿದೆ; ನಾಲ್ಕಾರು ಬಾರಿ ತಲೆ ಕೆರೆದೆ ಪ್ರಯೋಜನವೇನೂ ಆದಂತಿಲ್ಲ; ಉತ್ತರವೂ ಸಿಕ್ಕಿಲ್ಲಬಹುಷಃ ನಂಬಿಕೆಯೊಂದಿದ್ದರೆ, ಎಲ್ಲವನ್ನೂ ಬಾಯಿಬಿಟ್ಟು ಹೇಳಬೇಕೆಂದಿಲ್ಲ. ಎಲ್ಲವನ್ನೂ ಕಿವಿಯಿಂದಲೇ ಕೇಳಬೇಕೆಂದಿಲ್ಲ...!

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...