ಎದುರಿಗಿದ್ದಾಗ ಅದ್ಯಾವುದೋ ಅಹಂಕಾರಕ್ಕೆ ಆತ್ಮಾಭಿಮಾನಕ್ಕೆ ಸಣ್ಣ ಸಣ್ಣ ವಿಷಯಗಳಿಗೆ ಮುಖತಿರುವಿ ನಮ್ಮವರಿಂದಲೇ ಎದ್ದು ಬಂದುಬಿಟ್ಟಿರ್ತೀವಿ ಅಲ್ಲಿ ತಪ್ಪು ಯಾರದ್ದು ಅನ್ನುವುದಕ್ಕಿಂತ ಹೆಚ್ಚು ನಮ್ಮಲ್ಲಿನ ಜಂಭ ಅಹಂಕಾರ ಸೋಲ್ಬೇಡ ಅಂತ ಪದೇ ಪದೇ ಹೇಳಿ ಗೆಲ್ಲಿಸ್ಲಿಕ್ಕಿ ಪ್ರಯತ್ನ ಪಟ್ಟು ನಮ್ಮವರನ್ನೇ ನಮ್ಮಿಂದ ದೂರ ಮಾಡಿ ನಿಜವಾಗಿ ಸೋಲಿಸಿಬಿಡುತ್ತವೆ. ಆ ಕ್ಷಣಕ್ಕೆ ಸೋಲನ್ನು ಗೆಲುವು ಅಂತ ಸಂಭ್ರಮಿಸೋ ನಾವು ನಾಳೆ ಅವರು ಶಾಶ್ವತ ಮೌನಕ್ಕೆ ಒಳಗಾದಾಗ ಪ್ರಾಯಶ್ಚಿತ್ತದ ಮಾತುಗಳನ್ನಾಡ್ತೀವಿ.
ಬೆಂಗಳೂರು ಯಾಕೊ ರಾತ್ರಿ ನಾಲ್ಕು ಹನಿ ಬಿದ್ದು ಒದ್ದೆ ಒದ್ದೆ..ಬೆಳಿಗ್ಗೆ ನೋಡಿದರೆ ಮಲೆನಾಡಿನ ಬೆಳಗೇನೊ ಅನ್ನುವ ಹಾಗಿದೆ... ವರ್ಷ ಮುಗೀತಾ ಬಂತು.. ಸಾಧಿಸಿದ್ದು ಏನೂ ಇಲ್ಲ. ವರ್ಷ ಹೇಗಿತ್ತು ಅಂದರೆ ನನ್ನ ಪಾಲಿಗೆ ಯಾವತ್ತಿನ ಹಾಗೆ ಆರಕ್ಕೇರದ ಮೂರಕ್ಕಿಳಿಯದ ಎಂದಿನ ಹಾಗೆ.. ನಾನಂತೂ ಏನನ್ನೂ ಕಡಿದು ಗುಡ್ಡೆ ಹಾಕಲಿಲ್ಲ..
ಈ ವರ್ಷ ಬಹಳ ಸಾವು ನೋವು ಸಂಭವಿಸಿಬಿಟ್ಟಿತು... ಯಾಕೊ ಬೇಸರ.. ಹೋದೋರೆಲ್ಲ ಒಳ್ಳೆಯವರು ಅನ್ನೋದು ಬರೀ ಹಾಡೇ ಇರಬಹುದು. ಆದರೆ ಈ ವರ್ಷ ಹೋದವರೆಲ್ಲ ನಿಜವಾಗಲೂ ಒಳ್ಳೆಯವರೇ.
"ಆಸ್ಪತ್ರೆಗೆ ಹೋದಾಗ ಅನ್ಸತ್ತೆ ಬದುಕಿನ ಮೇಲೆ ನಮಗ್ಯಾಕಿಷ್ಟು ವ್ಯಾಮೋಹ ಅಂತ.
ಮನುಷ್ಯನ ವೈರಾಗ್ಯ ಏನಿದ್ರೂ ಕ್ಷಣಿಕ ಅನ್ನೋದು ಮಾತ್ರ ಸುಳ್ಳಲ್ಲ..!"
ವೈಯಕ್ತಿಕವಾಗಿ ಒಂದಿಷ್ಟು ಜನರನ್ನು ಕಳೆದುಕೊಂಡಿದ್ದೇನೆ. ಕೆಲವೊಮ್ಮೆ ವಿನಾಕಾರಣ. ಕೆಲವೊಮ್ಮೆ ನಮ್ಮ ಸಣ್ಣತನ. ಯಾರೊಂದಿಗೊ ಮುನಿಸಿಕೊಳ್ಳುವ ಪ್ರತೀ ಸಂದರ್ಭದಲ್ಲೂ ಯೋಚಿಸುವುದು ನಾನೇನು ಈ ಭೂಮಿಗೆ ಶಾಶ್ವತವಾಗಿರಲು ಬಂದಿದ್ದೇನಾ... ಇಲ್ಲಿರುವುದೇ ಕ್ಷಣಿಕವೆಂದಾಗ ಮುನಿಸೇತಕ್ಕೆ..? ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಂಬಂಧ ಮುರಿಯುವುದು ವಿಷಾದದ ವಿಷಯವೇ... ಬಹಳ ಪ್ರಯತ್ನಿಸುತ್ತೇನೆ ಹಿಡಿದಿಟ್ಟುಕೊಳ್ಳಲು. ಯಾವಾಗ ಅದು ನನ್ನ ನೆಮ್ಮದಿ ಕೆಡಿಸುತ್ತದೆ ಅನ್ನಿಸುತ್ತೊ ಅಲ್ಲಿಗೆ ಮುಷ್ಟಿ ಸಡಿಲಿಸುತ್ತೇನೆ. ಹಾಗೆ ಬಿಟ್ಟ ಯಾವುದರ ಕಡೆಗೂ ಮತ್ತೆ ತಿರುಗಲಾರೆ.. ಕೈ ಮೀರಿ ಮನಸ್ಸಿಲ್ಲದ ಮನಸ್ಸಿನಲ್ಲಿ ಯಾವುದೊ ಸಣ್ಣ ಕ್ಷುಲ್ಲಕ ಕಾರಣಗಳಿಂದ ಕಳೆದುಕೊಂಡ ಸಂಬಂಧಗಳ ಬಗ್ಗೆ ಬಹಳ ನೋವಾಗುತ್ತದೆ. ನಮ್ಮಲ್ಲಿಷ್ಟೊಂದು ಸಣ್ಣತನವೇತಕೆ ಎಂದು..ಕಳೆದುಕೊಂಡ ವಿಷಾದವೊಂದು ಕೊನೆಯ ತನಕ ಜೊತೆಯಾಗುತ್ತದೆ..
2018 ಬಹಳ ಖುಷಿ ಕೊಟ್ಟ ಅಷ್ಟೇ ನೋವು ಕೊಟ್ಟ ವರ್ಷವೆನ್ನಬಹುದು.. ಬೆಳಿಗ್ಗೆ ಎದ್ದಾಗಿನಿಂದ ಕಾಡುತ್ತಿರುವ ಭಾವವಿದು.. 2019 ರಿಂದ ಜಾಸ್ತಿ ಮುಖವಾಡಗಳನ್ನು ಖರೀದಿಸಿ ಕಡಿಮೆ ಅಟ್ಯಾಚ್ ಮೆಂಟ್ ಗಳನ್ನು ಬೆಳೆಸಿಕೊಂಡು ಬದುಕಬೇಕಿದೆ.. ಉಳಿದದ್ದು ಈ ವರ್ಷಕ್ಕೆ ಕೊನೆಯ ದಿನಗಳನ್ನು ನನಗಾಗಿ ಬದುಕಬೇಕಿದೆ..
ಸಾಧನೆಗಾಗಿನೋ, ಸಂಪಾದನೆಗಾಗಿನೋ ಅಲ್ಲ…
ನಮ್ಮಗೋಸ್ಕರ- ನಮ್ಮತನವನ್ನ ಶಾಶ್ವತವಾಗಿ ಉಳಿಸಿಕೊಳ್ಳೊದಿಕೋಸ್ಕರನಾದಾರೂ ಮನುಷ್ಯ ಬ್ಯೂಸಿಯಾಗಿರಬೇಕು..
ಇಲ್ಲಾಂದ್ರೇ.. ನೆಮ್ಮದಿ ಹುಡ್ಕೊಂಡು ಹಿಮಾಲಯಕ್ಕೋ, ಕಷ್ಟಗಳನ್ನ ಹಿಡ್ಕೊಂಡು ಪುಣ್ಯಕ್ಷೇತ್ರಗಳಿಗೋ ಅಲಿಬೇಕಾಗುತ್ತೆ..
ಬದುಕು ಮುಗಿದು ಹೋಗುವ ಮೊದ್ಲೇ…ಬದಲಾಗಿಬಿಡಬೇಕು. ನಮ್ಮತನವನ್ನ ಉಳಿಸಿಕೊಂಡು ಬಿಡಬೇಕು..!

No comments:
Post a Comment