Friday, May 10, 2019

#ಮೆಜೆಸ್ಟಿಕ್‌ನಲ್ಲೊಂದು ದಿನ..!

ಬೆಂಗಳೂರಿನ ಹೃದಯ ಭಾಗ ಎಂದರೆ ಅದು ಮೆಜೆಸ್ಟಿಕ್.  ಮೆಜೆಸ್ಟಿಕ್ಕಿನಲ್ಲಿ ಕತ್ತಲಾಗುವುದಿಲ್ಲ
ಆದರೂ ಬೆಳಗಾಗುತ್ತದೆ
ಯಾವ್ಯಾವುದೋ ಊರಿನಿಂದ ಹರಿದು ಬರುವ ಬಸ್ಸುಗಳು
ರಾಜಾಜಿ ನಗರಕ್ಕೂ ಸುಭಾಷ್ ನಗರಕ್ಕೂ ಒಂದು ಸೇತುವೆ ಕಟ್ಟುತ್ತವೆ.

ಅಮರ್ ಹೋಟೆಲ್ಲಿನ ಎದುರಿನ ಟೀ ಗಾಡಿಯಲ್ಲಿ
ನಿನ್ನೆ ಕುಡಿದ ಕಳಪೆ ಸರಕಿನ ಕಹಿಯಿನ್ನೂ ಹೋಗದ ಬಾಯಿಯಲ್ಲೇ
ಅವಳು ಚಹಾ ಒಂದನ್ನು ಕುಡಿಯುತ್ತಾಳೆ
ಮತ್ತೆ ಅಲ್ಲೆಲ್ಲೋ ನಗರದಹೊರ ವಲಯದ  ತನ್ನ ಮನೆಗೆ ಹೋಗುವ ಬಸ್ಸು ಹಿಡಿಯಲು ನಡೆಯುತ್ತಾಳೆ.

ಕೆಂಪು ಬಸ್ಸೊಂದರಿಂದ ಗಾಬರಿ ಕಣ್ಣಿನ ಹುಡುಗ - ಹುಡುಗಿ
ಭಯದಲ್ಲೇ ಬಸ್ಸಿಳಿಯುತ್ತಾರೆ
ತನ್ನೂರಿನ ನಂಬಿಕೆಯ ಗೆಳೆಯನ ರೂಮಿನ ವಿಳಾಸದ ಚೀಟಿ ಹಿಡಿದು
ಹೆದರಿಕೆಯಿಂದಲೇ ಬಸ್ಸು ಹುಡುಕುತ್ತಾರೆ.

ಅಲ್ಲಲ್ಲಿ ಮೇಲ್ಸೇತುವೆಯ ಮೇಲೆ ಮಲಗಿದ ಯಾವ್ಯಾವುದೋ ಊರಿನವರನ್ನು
ಬೆಳಗಿನ ಪಾಳಿಯ ವಾಚ್‌ಮನ್ ಕೋಲಿನಲ್ಲೇ ತಿವಿದು ಎಬ್ಬಿಸುತ್ತಾನೆ
ಎಲ್ಲಿಗೆ ಹೋಗಬೇಕೆಂದು ತಿಳಿಯದ ಅವರು ಕಣ್ಣು ಕಣ್ಣು ಬಿಡುತ್ತಾರೆ

ಘಂಟೆ ಆರಾಗುತ್ತಿದ್ದಂತೆ ಮೆಜೆಸ್ಟಿಕ್ ಮೈ ಮುರಿದು ಏಳುತ್ತದೆ
ಹಗಲೆಲ್ಲ ಸುತ್ತಿ ಹೈರಾಣಾದ ಬಸ್ಸುಗಳ ಬಿಸಿ ವಾಸನೆಯ ಜಾಗದಲ್ಲೀಗ
ಅವರಿವರ ಡಿಯೋ - ಪರ್ಫ್ಯೂಮುಗಳ ವಾಸನೆ ಮೆಲ್ಲಗೆ ಹರಡುತ್ತದೆ
ಕಡಲು ಸೇರುವ ನದಿಯಂತೆ
ಬೆಂಗಳೂರಿನ ಎಲ್ಲ ಮೂಲೆಗಳ ಬಸ್ಸುಗಳು ಮೆಜೆಸ್ಟಿಕ್ಕಿನ ತೆಕ್ಕೆಗೆ ಸೇರುತ್ತವೆ

ಮತ್ತೊಂದು ಹಗಲು ರೆಕ್ಕೆ ಬಿಚ್ಚುತ್ತದೆ
ಹೇಳಲು ಹೊರಟರೆ ಮೆಜೆಸ್ಟಿಕ್ಕಿನ ಹಗಲಿನದೇ ಒಂದು ಕತೆ
ಮತ್ತೆ ಸಿಕ್ಕಾಗ ಮಾತಾಡೋಣ...!

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...