Thursday, October 22, 2020

#ನೆರಳುಗಳ ಬೆನ್ನುಹತ್ತಿ..!


ಬೆಂಗಳೂರೆಂಬೋ ಮಹಾ‌ಗರ್ಭಕ್ಕೆ‌ ಬಂದು‌ಸೇರಿ‌ 6‌ ವರುಷಗಳು‌ ಕಳೆದವು. ಇಲ್ಲಿ‌ಪಡೆದದ್ದು‌ ಕಳೆದದ್ದು ಎಲ್ಲವೂ‌ ಇದೆ. ಬದುಕಿಗೋಸ್ಕರ‌ ನಡೆಸುವ‌ ಹೋರಾಟವಿದೆ. ನನ್ನಂತದೇ‌ ಸಾವಿರ‌ಕನಸುಗಳ ಪರದಾಟವನ್ನೂ‌ ಕಂಡಿದ್ದೇನೆ. ಬದುಕೆಂದರೆ‌ ಹೊಟ್ಟೆ‌ತುಂಬಿಸಿಕೊಳ್ಳುವ‌ ಹೋರಾಟವಷ್ಟೇ‌ ಅಲ್ಲವಾ? ಮನಸು‌, ಪ್ರೀತಿ‌, ಭಾವನೆ‌ ಎಲ್ಲವೂ‌ ನಂತರ ಅನಿಸಿದೆ‌. ಆದರೆ‌ ಅದೆಷ್ಟೋ‌ ಬಾರಿ‌ ತರಕಾರಿ ಮಾರುವ‌ವ‌ ಬಿಸಿಲಲ್ಲ, ಬರಗಾಲಲ್ಲಿ ಮನೆ‌ಮನೆಯ‌ ಅಲೆಯುವುದು‌ ಮನೆಯಲ್ಲಿ‌ ಕಾಯುವ ಯಾರದೋ‌ ಮೇಲಿನ‌ ಪ್ರೀತಿಗೆ‌ ಅಲ್ಲವಾ‌ ಅಂತಲೂ ಎನಿಸಿದೆ.

ಇಲ್ಲಿ‌ ಬಂದಾಗಿನಿಂದ‌ ಪ್ರತಿ‌ ನಿತ್ಯವೂ ಬದುಕ ಹೊಸ ಹೊಸ ಪಾಠ ಕಲಿಯುತ್ತಿದ್ದೇನೆ. ಕಾಲು ನೋಯುವಷ್ಟು‌ ನಡೆದಿದ್ದೇನೆ. ಕಾಲು ನೋವೆಂದು‌ ನಡೆಯಲೂ‌ ಆಗದೇ‌ ಮಲಗಿದ್ದೇನೆ. ಕೊಟ್ಟ ದುಡ್ಡಿಗೆ‌ ಚಿಲ್ಲರೆ‌‌ ಕೊಡದೇ ಮೋಸ‌ಮಾಡಿದ‌‌ವನಿಂದ‌‌ ಹಿಡಿದು, ನಡೆಯಲೂ‌ ಕಷ್ಟಪಡುವ ಯಾರೋ ಮಹಾ‌ತಾಯಿ ಅದ್ಯಾವುದೋ ದಾರಿ‌ ತೋರಿಸಿದ್ದೂ‌‌ ಇದೆ.

ಕಣ್ಣು‌ಹಾಯಿಸಿದಷ್ಟೂ‌ ದೂ‌ರಕ್ಕೆ‌ ಮನುಷ್ಯರೇ‌ ಕಾಣುವ‌ ಇಲ್ಲಿ ತೀರಾ‌ಕಾಡಿದ್ದು ಒಂಟಿತನದ ಹಸಿವು. ಯಾವಾಗಲೂ ಓಡಾಡುತ್ತಲೇ ಇರುವ ಮನುಷ್ಯ ಸಾಗುತ್ತಿರುವ ದಾರಿ ಮತ್ತು ಸೇರುವ ಗುರಿ ಮಾತ್ರ ನಿಗೂಢವೇ ಸರಿ. ಮಾತು ಬರದ ಸಾವಿರ ಮರಗಳು ಸುತ್ತ ಇದ್ದರೆ‌ ಬರದ ಒಂಟಿತನ ಮಾತು ಬರುವ ಹತ್ತು ಜನ ಸುತ್ತ ಇದ್ದರೆ ಹೆಚ್ಚುತ್ತದೆ. ಮನುಷ್ಯ ಒಂಟಿತನವ ಕಳೆಯಲು ಸಂಬಂಧಗಳ ಕಟ್ಟಿಕೊಂಡ ಮತ್ತು ಕಟ್ಟಿಕೊಂಡ ಸಂಬಂಧಗಳಿಂದ ಒಂಟಿತನವ ಸುತ್ತಿಕೊಂಡ. ಮನುಷ್ಯ ‌ಒಂಟಿಯಾದಷ್ಟು‌ ಕನಸುಗಾರನಾಗುತ್ತಾನೆ. ತನ್ನ ತಾನು ಪ್ರೀತಿಸಿಕೊಂಡಷ್ಟು ಕ್ರೀಯಾಶೀಲನಾಗುತ್ತಾನೆ. ಕ್ರೀಯಾಶೀಲತೆ ಮತ್ತಷ್ಟು ‌ಪ್ರೀತಿಸಿಕೊಳ್ಳುವಂತೆ ಮಾಡುತ್ತದೆ.

ಮಹಾನಗರಿಯಲ್ಲಿ ಮನೆ ಕಟ್ಟುವುದು‌, ಮನೆ ಒಡೆಯುವುದು ಎರಡು ಬಹು‌‌ಸುಲಭ ಹಾಗೆಯೇ ಮನಸುಗಳನ್ನೂ.... ಆದರೆ ಮಾತು‌, ಮುತ್ತಷ್ಟು‌ ಸುಲಭವಲ್ಲ ಇಲ್ಲಿ. ಮುತ್ತು‌ಸಿಕ್ಕಷ್ಟು‌ ಸುಲಭವಲ್ಲ ಮುತ್ತಿನಂಥ‌ ಮಾತು‌ಸಿಗುವುದು. ಮನಸು‌ ಗೆಲ್ಲುವುದು‌ ಕಷ್ಟವಲ್ಲ ಅಷ್ಟಕ್ಕೂ‌ ಮನಸಿಗೆ‌ ಅರ್ಥವಿಲ್ಲ. ಗೆಲುವಿಗೆ ಬೆಲೆಯಿಲ್ಲ.

ನದಿ ಹರಿಯುವಾಗ‌ ಮಾತ್ರ ಅದಕ್ಕೆ ಅದರದ್ದೆ ಹೆಸರು‌. ಹಾದಿಬೀದಿಯವರೆಲ್ಲ ಅದನ್ನು‌ಹೊಗಳಿದ್ದೆ‌. ಆದರೆ ಅದು‌‌ ಯಾವತ್ತು‌ ಸಾಗರನ ಸೇರಿಕೊಂಡಿತೋ ಅದರ ಅಸ್ತಿತ್ವಕ್ಕೆ ‌ಬೆಲೆಯಿಲ್ಲ ಕಡೆಗೆ ಅದು‌ ಸಾಗರನ ಸೇರಿದ್ದರ ಕುರುಹೂ‌ ಇಲ್ಲ. ಮಹಾನಗರಿಯೂ‌ ಹೀಗೆಯೇ.

ಸಾವಿರ‌ ನದಿಗಳು‌ ಸೇರಿಯೇ ಸಾಗರವಾಗಿದ್ದು ಆದರೆ‌ ಒಮ್ಮೆ ಸಾಗರವ ಸೇರಿದ‌ ಮೇಲೆ‌ ನದಿಗೆ ಅದರ ಮೂಲ ಹರಿವಿಲ್ಲ, ಬಣ್ಣವಿಲ್ಲ ಮತ್ತು ರುಚಿಯೂ ಇಲ್ಲ. ಮೂ‌ಲ ಸ್ವಭಾವವೇ ಉಳಿಯದ ಮೇಲೆ‌ ಅದು ನದಿಯಾಗಿ‌ ಉಳಿಯುವುದಾದರೂ‌ ಹೇಗೆ?

ಮಹಾನಗರಿಯೂ ಅಷ್ಟೇ, ವೇಷಭೂಷಣದಿಂದ‌ ಹಿಡಿದು ಯೋಚಿಸುವ ರೀತಿಯನ್ನೇ‌ ಬದಲಾಯಿಸುತ್ತದೆ. ಬದಲಾಯಿಸಿಕೊಳ್ಳಲು‌ ಯಾರೂ ಹೇಳಿಲ್ಲ ಆದರೂ ಬದಲಾವಣೆ‌ ಇಲ್ಲಿಯ‌ ನಿಯಮ.

ಬದಲಾಗಿದ್ದಕ್ಕೆ ಬೇಸರವಿಲ್ಲ ಹಾಗೆಯೇ,‌ ಅಸ್ತಿತ್ವದ‌ ಹುಡುಕಾಟಕ್ಕೂ. ಬಾಹ್ಯ ಬದಲಾವಣೆಯೇ ಬದುಕ ಬದಲಾವಣೆಯಲ್ಲ. ಮಹಾನಗರಿ ಆಂತರಿಕ ಬದಲಾವಣೆಯನ್ನೂ ಮಾಡುತ್ತಲೇ ಇರುತ್ತದೆ.

ಸುಲಭವಿರಲಿಲ್ಲ, ಕಾಡಿನಲ್ಲಿ ಒಂಟಿಯಾಗಿ ಹರಿವಾಗ‌ ಸಿಕ್ಕ ಹೆಸರನ್ನು ಉಳಿಸಿಕೊಳ್ಳುವುದು. ಅಲ್ಲಿದ್ದಾಗ ಮಾತ್ರ ಕಾವೇರಿ,ಗೋಧಾವರಿ,ಕಾಳಿ‌ ಸಾಗರವ‌ ಸೇರಿದ‌ ಮೇಲೆ ಅದು‌ ಸಾಗರ‌ ಅಷ್ಟೇ. ಇಲ್ಲೂ ಅಷ್ಟೇ ಒಮ್ಮೆ ಗುಂಪ ಸೇರಿದೆಯೋ ನೀನೂ‌ ಗುಂಪಿನ‌ ಒಬ್ಬ ಸದಸ್ಯ ಮಾತ್ರ. ಆದರೆ ಗುಂಪಿನ ಸದಸ್ಯತ್ವವೂ ಒಂಥರ ಖುಷಿಯೇ.

ಬದಲಾವಣೆಗೆ ಹಸ್ತ‌ ಚಾಚುವ ನಗರಿ‌ ಬದಲಾಗಲಾರೆ‌ ಎಂದರೆ‌ ಅಲ್ಲೇ ಇರು‌ ಎಂದು‌ ಮುಂದೆ ‌ಸಾಗುತ್ತದೆ.
ನಾನು‌ ಎಂಬುದಕ್ಕೆ‌ ಸಾವಿರ‌ ಅರ್ಥ. ಕಳೆದೋದೆ ಎಂದರೆ ಶೂನ್ಯ ಭಾವ, ಬದಲಾದೆ ಎಂದರೆ‌ ಪ್ರಗತಿಯ ಸಂಕೇತ.

ನಾನೇನೂ ಮಹಾನಗರಿಯ ದ್ವೇಷಿ‌ ಅಲ್ಲ. ಇಲ್ಲಿ ನನ್ನ ಬದುಕಿಗೊಂದು‌ ಸ್ವಾಭಿಮಾನ ‌ಸಿಕ್ಕಿದೆ. ಸಂಬಳ ಬಂದ ದಿನದ‌ ಖುಷಿಯೇ ತಿಂಗಳ ಪೂರ್ತಿ ಇರಲಾರದು‌ ಆದರೆ‌ ಮತ್ತೆ ಖುಷಿಪಡುವ ದಿನ‌ ಬಂದೇ ಬರುತ್ತದೆ. ಈ ಬಕಾಸುರನಂಥ ಬೆಂಗಳೂರಲ್ಲಿ ಪ್ರತಿ ಕ್ಷಣವೂ ನನ್ನನ್ನ ಹುಡುಕಿಕೊಳ್ಳುವ ಖುಷಿಯಿದೆ. ಸೋತರು‌ ಗೆದ್ದರೂ ನಂಗೆ ನಾನು‌ ಸಂಪೂರ್ಣ ‌ದಕ್ಕಿದ್ದೇನೆ. ಗೆಲುವಿನ ಅರ್ಥ ವಿಶಾಲವಾಗಿದೆ. ಇಷ್ಟಕ್ಕೂ ಬದುಕು ಮತ್ತು ಗೆಲುವು ಯಾರೋ ವ್ಯಾಖ್ಯಾನಿಸಿ ಬರೆದಿಟ್ಟ ಸಂವಿಧಾನದ ಸಾಲುಗಳಲ್ಲ.

ಪ್ರತಿದಿನಕ್ಕೂ ನಮ್ಮೊಳಗೆ ಹುಟ್ಟಿ ಹೊಸ ಅರ್ಥ ಕೊಡುವ ಕಾವ್ಯದ ಹಾಗೇ ಅಲ್ಲವಾ??

                                                                                                    - ಮತ್ತೆ ಸಿಗುವಾ ನಾಳೆಗಳ್ಳಿದ್ದರೆ

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...